ಪಾದಯಾತ್ರೆಯಲ್ಲಿ ಪೊಲೀಸರು ಕೆಲಸವೇ ಮಾಡಿಲ್ಲ: ಡಿಕೆ ಶಿವಕುಮಾರ್ | ಜನತಾ ನ್ಯೂಸ್
ಬೆಂಗಳೂರು : ಕಾಂಗ್ರೆಸ್ ಪಾದಯಾತ್ರೆಯಲ್ಲಿ ಪೊಲೀಸರು ಕೆಲಸವೇ ಮಾಡಿಲ್ಲ. ನಮ್ಮ ಕಾರ್ಯಕರ್ತರೇ ನಮಗೆ ಭದ್ರತೆಯನ್ನು ನೀಡಿದ್ದರು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಮೇಕೆದಾಟು ಪಾದಯಾತ್ರೆಗೆ ನಿಯೋಜನೆಗೊಂಡಿದ್ದ ಪೊಲೀಸರಿಗೆ ಕೊರೊನಾ ಬಂದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಪೊಲೀಸರು ಒಂದೇ ಒಂದು ಬಸ್ಸು ನಿಯಂತ್ರಿಸುವ ಕೆಲಸವನ್ನಾದರೂ ಮಾಡಿದ್ದಾರಾ? ನಮ್ಮ ಕಾರ್ಯಕರ್ತರೇ ಜನರನ್ನು ನಿಯಂತ್ರಿಸಿದರು. ಊಟದ ಬಳಿಯೂ ನಮ್ಮವರೇ ಎಲ್ಲಾ ನಿಯಂತ್ರಿಸಿದ್ದಾರೆ ಎಂದಿದ್ದಾರೆ.
ಯೋಜನೆಗಾಗಿ ಮತ್ತೆ ಪಾದಯಾತ್ರೆ ಮಾಡುತ್ತೇವೆ. ಸರ್ಕಾರ ಸ್ವಲ್ಪ ನಿಯಮ ಸಡಿಲಿಸಲಿ ಪಾದಯಾತ್ರೆ ಮಾಡುತ್ತೇವೆ. 50-100 ಜನಕ್ಕೆ ಅನುಮತಿ ಕೊಟ್ಟರೂ ಪಾದಯಾತ್ರೆ ಮಾಡುತ್ತೇವೆ ಅಂತ ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಬಿಜೆಪಿ ನಾಯಕರ ವಿರುದ್ಧ ಏಕೆ ಪ್ರಕರಣ ದಾಖಲು ಮಾಡಿಲ್ಲ. ನಾವು ಕೋರ್ಟ್ನಲ್ಲಿ ಈ ಬಗ್ಗೆಯೂ ಹೋರಾಡುತ್ತೇವೆ. ಕೇವಲ ಸರ್ಕಾರ ಅಲ್ಲ ಅಧಿಕಾರಿಗಳನ್ನ ಟಾರ್ಗೆಟ್ ಮಾಡ್ತೇವೆ . ಸರ್ಕಾರ ಎಚ್ಚೆತ್ತು ಎಲ್ಲರನ್ನೂ ಸಮನಾಗಿ ನೋಡದಿದ್ರೆ ಸರಿ ಇರಲ್ಲ. ಈಗ ಅದ್ಯಾವುದೋ ಹಳೇ ಹಳೇ ಕೇಸ್ ಓಪನ್ ಮಾಡಿದ್ದಾರೆ.
ಆ ಕಾಲ ಬಂದೇ ಬರುತ್ತೆ. ನನ್ನ ಮೇಲೆ ಏನೇನು ಬೇಕೋ ಎಲ್ಲವನ್ನ ಮಾಡ್ತಾ ಇದ್ದಾರೆ. ಐಟಿ, ಇಡಿ ಸೇರಿ ಎಲ್ಲದರ ಬಗ್ಗೆ ಸಾಕ್ಷಿ ಸಮೇತ ಮಾತಾಡುವೆ. ಏನೇನು ತೊಂದರೆ ಕೊಡಬೇಕೋ ಕೊಡ್ತಾ ಇದ್ದಾರೆ ಅಂತ ಡಿಕೆಶಿ ಹೇಳಿದರು.